ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಈಗಾಗಲೇ ಪ್ರಾರಂಭವಾಗಿದೆ. ಈ ನಡುವೆ ಹಲವಾರು ಸುಳ್ಳು ಸುದ್ದಿಗಳು ಮಾಮೂಲಿನಂತೆ ಸಾಮಾಜಿಕ ತಾಣಗಳಲ್ಲಿ ಹರಿದಾಡಲು ಪ್ರಾರಂಭವಾಗಿದೆ. ಇದೀಗ ವ್ಯಕ್ತಿಯೋರ್ವ ಮತದಾನ ಮಾಡುವ ಬೂತ್ ಒಳಗಡೆ ತೆರಳಿ ಮತದಾನ ಯಂತ್ರವನ್ನು ಒಡೆದುಹಾಕುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಪಕ್ಷದವರ ಹತಾಶೆಯ ಪರಮಾವಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡುತ್ತಿದ್ದಾರೆ ಎಚ್ಚರಿಕೆ ವಹಿಸಿ ಎಂಬ ತಲೆಬರಹದಲ್ಲಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಕೆಲವು ಉದಾಹರಣೆಗಳನ್ನು ನಿಮಗೆ ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಫ್ಯಾಕ್ಟ್ ಚೆಕ್: ಈ ಪ್ರಕರಣವನ್ನು ʼನ್ಯೂಸ್ ಮೀಟರ್ʼ ಸತ್ಯಶೋಧನೆ ಮಾಡಿದ್ದು, ಇದು ಹಳೆಯ ಸುದ್ದಿಯಾಗಿದ್ದು, ಇದಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಮತ್ತು ಸುಳ್ಳು ತಲೆಬರಹದಲ್ಲಿ ಈ ವೀಡಿಯೊವನ್ನು ಹರಿಬಿಡಲಾಗುತ್ತಿದೆ ಎಂದು ಪತ್ತೆಹಚ್ಚಲಾಗಿದೆ.
ಕೀವರ್ಡ್ ಗಳನ್ನು ಬಳಸಿ ಈ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಇದು 2023 ರಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ದಿಗ್ವಿಜಯ ನ್ಯೂಸ್ ನಲ್ಲಿ ಪ್ರಕಟವಾದ ವೀಡಿಯೊವನ್ನು ಸಾಮಾಜಿಕ ತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪತ್ರಿಕಾ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನಿಮಗೆ ನೋಡಬಹುದಾಗಿದೆ.
ಘಟನೆಯು ಮೈಸೂರಿನಲ್ಲಿ ಮೇ 10, 2023ರಲ್ಲಿ ನಡೆದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಬೂತ್ ಗೆ ಮತ ಚಲಾಯಿಸಲೆಂದು ತೆರಳಿದ ವೇಳೆ ಅಲ್ಲಿದ್ದ ಮತಯಂತ್ರವನ್ನು ಒಡೆದು ಹಾಕಿದ್ದ. ಬಳಿಕ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದರು. ಖುದ್ದು ಪೊಲೀಸರೆ ಈ ಕುರಿತು ಬಳಿಕ ಸ್ಪಷ್ಟನೆ ನೀಡಿದ್ದು, ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದಾಗಿ ʼಪ್ರಜಾವಾಣಿʼ ವರದಿ ತಿಳಿಸಿದೆ. ವ್ಯಕ್ತಿಯನ್ನು ಹೂಟಗಳ್ಳಿ ನಿವಾಸಿ ಶಿವಮೂರ್ತಿ ಎಂದು ಗುರುತಿಸಲಾಗಿದೆ.
ಆದ್ದರಿಂದ, ಮಾನಸಿಕ ಖಿನ್ನತೆಯಿಂದ ವ್ಯಕ್ತಿಯೋರ್ವ ನಡೆಸಿರುವ ದಾಂಧಲೆಯನ್ನು ʼಕಾಂಗ್ರೆಸಿಗರುʼ ಮಾಡುತ್ತಿರುವ ಅನಾಹುತವೆಂದು ಸುಳ್ಳು ಹೆಸರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಸತ್ಯಶೋಧನೆಯಲ್ಲಿ ತಿಳಿದು ಬಂದಿದೆ.